ಬೆಂಗಳೂರು, ಮೇ 14: ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಮಹತ್ವದ ಸಿಹಿ ಸುದ್ದಿಯನ್ನು ನೀಡಿದೆ. ಬೆಳಗಾವಿಯಿಂದ ಸಿಕಂದರಾಬಾದ್ ಹಾಗೂ ಚರ್ಲಪಲ್ಲಿಗೆ ಸಂಚರಿಸುತ್ತಿದ್ದ ವೀಕ್ಲಿ ವಿಶೇಷ ಎಕ್ಸ್ಪ್ರೆಸ್ ರೈಲುಗಳಿಗೆ ಇದೀಗ ರೈಲ್ವೆ ಮಂಡಳಿ ಕಾಯಂ ಮಾನ್ಯತೆ ನೀಡಿದೆ. ಈ ಕ್ರಮದಿಂದ ಮೂರು ರಾಜ್ಯಗಳ ನಡುವಿನ ರೈಲು ಸಂಪರ್ಕ ಮತ್ತಷ್ಟು ಬಲವಾಗಲಿದೆ.
ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆ ಮತ್ತು ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದೆ ವಿಶೇಷ ರೈಲುಗಳಾಗಿ ಓಡುತ್ತಿದ್ದ ಸೇವೆಗಳನ್ನು ಈಗ ನಿಯಮಿತ ರೈಲುಗಳಾಗಿ ಪರಿವರ್ತಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ನಿರಂತರ ಹಾಗೂ ವಿಶ್ವಾಸಾರ್ಹ ರೈಲು ಸೇವೆ ದೊರೆಯಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯೂ ಸುಲಭವಾಗಲಿದೆ.
ಕಾಯಂಗೊಂಡ ಪ್ರಮುಖ ರೈಲುಗಳು
- ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ವೀಕ್ಲಿ ಎಕ್ಸ್ಪ್ರೆಸ್
- ಸಿಕಂದರಾಬಾದ್ – ಬೆಳಗಾವಿ – ಸಿಕಂದರಾಬಾದ್ ವೀಕ್ಲಿ ಎಕ್ಸ್ಪ್ರೆಸ್
ನೈಋತ್ಯ ರೈಲ್ವೆಯ ಪ್ರಕಾರ, ಈ ರೈಲುಗಳು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಉದ್ದೇಶಕ್ಕಾಗಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿವೆ. ವಿಶೇಷವಾಗಿ ಹೈದರಾಬಾದ್ ಭಾಗದಿಂದ ಕರ್ನಾಟಕಕ್ಕೆ ಮತ್ತು ಬೆಳಗಾವಿಯಿಂದ ತೆಲಂಗಾಣ ಭಾಗಗಳಿಗೆ ಸಂಪರ್ಕ ಮತ್ತಷ್ಟು ಸುಧಾರಣೆಯಾಗಲಿದೆ.
ಸಿಕಂದರಾಬಾದ್ ಮತ್ತು ಬೆಳಗಾವಿ ನಡುವಿನ ರೈಲು ಸೇವೆ ತೆಲಂಗಾಣದ ಜೊತೆಗೆ ಆಂಧ್ರ ಪ್ರದೇಶದ ಹಲವು ಭಾಗಗಳಿಗೂ ಸಂಪರ್ಕ ಕಲ್ಪಿಸುವುದರಿಂದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಈ ಕುರಿತು ದಕ್ಷಿಣ ನೈಋತ್ಯ ರೈಲ್ವೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ತೆಲಂಗಾಣ ಮತ್ತು ಕರ್ನಾಟಕ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ” ಎಂದು ತಿಳಿಸಿದೆ.
ಈ ನಿರ್ಧಾರದಿಂದ ಮೂರು ರಾಜ್ಯಗಳ ನಡುವಿನ ಪ್ರಯಾಣ ಇನ್ನಷ್ಟು ಸುಲಭ ಮತ್ತು ಅನುಕೂಲಕರವಾಗಲಿದ್ದು, ರೈಲು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.